ಅಕ್ಕಲಕೋಟೆ 
ಗುಲ್ಬರ್ಗಕ್ಕೆ ಸಮೀಪದಲ್ಲಿರುವ ಪ್ರಾಚೀನ ಐತಿಹಾಸಿಕ ಸ್ಥಳ. ಇದು ಸಾತವಾಹನರ ಮತ್ತು ರಾಷ್ಟ್ರಕೂಟರ ರಾಜ್ಯದಲ್ಲಿ ಸೇರಿತ್ತೆಂದು ಶಾಸನಗಳಿಂದ ಗೊತ್ತಾಗುತ್ತದೆ. ಯಾದವ ಮನೆತನದವರ ಅನೇಕ ಶಾಸನಗಳು ಇಲ್ಲಿ ದೊರೆತಿರುವುದರಿಂದ 14ನೆಯ ಶತಮಾನದವರೆಗೆ ಇದು ಯಾದವರ ಆಳ್ವಿಕೆಯಲ್ಲಿತ್ತು ಎಂದು ತಿಳಿದುಬರುತ್ತದೆ. 16ನೆಯ ಶತಮಾನದಲ್ಲಿ ಬಿಜಾಪುರ ಮತ್ತು ಅಹಮದ್ನಗರ ರಾಜ್ಯಗಳ ಯುದ್ಧಗಳು ಇಲ್ಲಿ ನಡೆದುವು. ಶಿವಾಜಿಯ ಮೊಮ್ಮಗನಾದ ಷಾಹು ರಾಣೋಜಿ ಎಂಬ ಬಾಲಕನಿಗೆ ಫತೇಸಿಂಗ್ ಎಂಬ ಹೊಸ ಹೆಸರನ್ನು ಕೊಟ್ಟು 1712ರಲ್ಲಿ ಅವನಿಗೆ ಅಕ್ಕಲಕೋಟೆಯನ್ನು ಜಹಗೀರನ್ನಾಗಿ ಕೊಟ್ಟ. 1760ರಲ್ಲಿ ಫತೇಸಿಂಗನು ಮರಣಹೊಂದಲು ಷಾಹಜಿ ಅಕ್ಕಲಕೋಟೆ ಸಂಸ್ಥಾನದ ರಾಜನಾದ. ಇವನಿಗೂ ಇವನ ಸಹೋದರನಾದ ತುಳಜೀ ಎಂಬುವನಿಗೂ ಆದ ಕಲಹದಲ್ಲಿ ಅಬ್ಬಾಸಾಹೇಬನ ಪರವಾಗಿ ಈಸ್್ಟ ಇಂಡಿಯಾ ಕಂಪೆನಿ ಈ ಕಲಹದಲ್ಲಿ ಪ್ರವೇಶಿಸಿತು. ಅಬ್ಬಾಸಾಹೇಬನೇ ಅಕ್ಕಲಕೋಟೆಯ ರಾಜನೆಂದು ತೀರ್ಮಾನಿಸಿತು. ಇವನು 1822ರಲ್ಲಿ ಮರಣಹೊಂದಲು ಇವನ ಮಗನಾದ ಮಾಲೋಜಿ ರಾಜನಾದ. ಮಾಲೋಜಿ 1828ರಲ್ಲಿ ಮರಣ ಹೊಂದಲು ಇವನ ಮಗನಾದ ಷಾಹಜಿ ರಾಜನಾದ. ಆಗ ಇವನಿಗೆ ಕೇವಲ 8 ವರ್ಷ. ಆದುದರಿಂದ ಸತಾರ ಸಂಸ್ಥಾನದ ರಾಜ ಇವನ ಪರವಾಗಿ ರಾಜ್ಯಭಾರ ಮಾಡಲು ಪ್ರಾರಂಭಿಸಿದ. ಆದರೆ ಜನಗಳು ಸತಾರದ ರಾಜನಮೇಲೆ ದಂಗೆ ಎದ್ದರು. ಬ್ರಿಟಿಷ್ ಸೈನ್ಯ ದಂಗೆಯನ್ನು ಅಡಗಿಸಿ ಬ್ರಿಟಿಷ್ ಗವರ್ನರನ್ನು ನೇಮಕ ಮಾಡಿತು. ಅನಂತರ ಷಾಹಜಿ ಬ್ರಿಟಿಷರ ಅಧೀನನಾಗಿ ಆಳಿದ. ಭಾರತ ಸ್ವತಂತ್ರವಾದ ಮೇಲೆ ಅಕ್ಕಲಕೋಟೆ ಸಂಸ್ಥಾನ ಮಹಾರಾಷ್ಟ್ರ ಸರ್ಕಾರದ ಆಡಳಿತಕ್ಕೊಳಪಟ್ಟು ಶೋಲಾಪುರ ಜಿಲ್ಲೆಯ ಭಾಗವಾಗಿ ಮುಂದುವರೆಯುತ್ತಿದೆ.

ಈಗ ಊರು ಪ್ರಮುಖ ರೈಲುನಿಲ್ದಾಣವಾಗಿದೆ. ಜನಸಂಖ್ಯೆ 21,500. ಸಮುದ್ರಮಟ್ಟದಿಂದ 1800' ಎತ್ತರವಿದ್ದು ಸಹ್ಯಾದ್ರಿಯ ಮಳೆಯ ನೆರಳಿನಲ್ಲಿರುವುದರಿಂದ ವಾರ್ಷಿಕ ಮಳೆ ಸು. 63-76ಸೆಂ.ಮೀ ಮಾತ್ರ. ಬೋರಿ ಮತ್ತು ಹರಣಿ ನದಿಗಳು ದಕ್ಷಿಣಕ್ಕೆ ಹರಿಯುತ್ತವೆ. ನೀರು ಮತ್ತು ವಿದ್ಯುತ್ ಪುರೈಕೆ ಬೋರಿನದಿಯಿಂದ. ನೆಲ ಕರಿ ಮತ್ತು ಕೆಂಪು; ವೃಕ್ಷರಹಿತ. ಜೋಳ, ನೆಲಗಡಲೆ, ಸಜ್ಜೆ, ಗೋದಿ, ತೊಗರಿ, ಅಗಸೆ, ಹತ್ತಿ, ಮೆಣಸಿನಕಾಯಿ, ಬತ್ತ, ಕಬ್ಬು, ಬಾಳೆ, ವೀಳೆಯದೆಲೆ-ಇವು ಇಲ್ಲಿನ ಬೆಳೆಗಳು. ಒಕ್ಕಲುತನ, ತೋಟಗಾರಿಕೆ, ನೇಯ್ಗೆ ಇವು ಪ್ರಮುಖ ಉದ್ಯಮಗಳು. ಇಲ್ಲಿ ಸ್ವಾಮಿ ಮಹಾರಾಜರ ಸಮಾಧಿ ಮತ್ತು ಶಸ್ತ್ರಾಸ್ತ್ರ ಸಂಗ್ರಹಾಲಯಗಳು ಪ್ರೇಕ್ಷಣೀಯ ಸ್ಥಳಗಳಾಗಿವೆ.			

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ